ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಹಾ ಶಿವೋತ್ಸವ ಕಾರ್ಯಕ್ರಮ
Correspondent/Malur/Srinath/SM News Desk
ಮಾಲೂರು:- ಮಹಾಶಿವರಾತ್ರಿಯು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಹಬ್ಬವಾಗಿದ್ದು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಅರಸುವ ಆಧ್ಯಾತ್ಮಿಕ ದಿನವಾಗಿದೆ ಇದು ಯಾವುದೇ ರಾಜಕೀಯ ಉದ್ದೇಶದಿಂದ ಮಾಡಿದ ಕಾರ್ಯಕ್ರಮವಲ್ಲ ಹಿಂದುಗಳ ಜಾಗರಣೆ ಹಬ್ಬ ಇಂದು ಶಾಸಕ ಕೆ ವೈ ನಂಜೇಗೌಡ ಹೇಳಿದರು.ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೋಂಡಾ ಕ್ರೀಡಾಂಗಣದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಹಾ ಶಿವೋತ್ಸವ ಕಾರ್ಯಕ್ರಮದ ಭಕ್ತಿಗೀತೆಗಳ ಗಾಯನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ. ಅದೇ ರೀತಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಯುವಪಡೆ ಸೇರಿ ಸುಮಾರು 3 ತಿಂಗಳ ಸತತ ಪ್ರಯತ್ನದಿಂದ ಕೆಎನ್ ಸುನಿಲ್ ನಂಜೆ ಗೌಡರ ನೇತೃತ್ವದಲ್ಲಿ ಈ ಮಹಾಶಿವರಾತ್ರಿಯ ಶಿವೋತ್ಸವ ಕಾರ್ಯಕ್ರಮವನ್ನು ನಗರದ ಹೋಂಡಾ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿರುವುದು ಶ್ಲಾಘನೀಯವಾದದ್ದು.
ಇದು ಯಾವುದೇ ರಾಜಕೀಯ ಪ್ರೇರಿತ ಕಾರ್ಯಕ್ರಮವಲ್ಲ ಹಿಂದೂ ಧಾರ್ಮಿಕ ಕಾರ್ಯಕ್ರಮ ನಾವೆಲ್ಲರೂ ಒಟ್ಟಾಗಿ ಸೇರಿ ಭಕ್ತಿ ಗಾಯನ ಗೀತೆಗಳನ್ನು ಆಸ್ವಾದಿಸುವ ಮೂಲಕ ಜಾಗರಣೆ ಮಾಡಿ ಶಿವ ಸ್ಮರಣೆ ಮಾಡೋಣ ಎಂದು ನುಡಿದರು.ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನಿಲ್ ನಂಜೇಗೌಡ ಮಾತನಾಡಿ ನಮ್ಮ ಕಾಂಗ್ರೆಸ್ ಯುವ ಪಡೆಯಿಂದ ತಾಲ್ಲೂಕಿನ ಜನತೆಗೆ ಪ್ರತಿ ವರ್ಷವೂ ಒಂದಲ್ಲ ಒಂದು ಕಾರ್ಯಕ್ರಮವನ್ನು ನಗರದ ಹೋಂಡ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಿದ್ದು 2025 ರಲ್ಲಿ ಫೈನಲ್ ಐಪಿಎಲ್ ಆರ್ ಸಿ ಬಿ ಪಂದ್ಯಾವಳಿಯನ್ನು ಎಲ್ಇಡಿ ಪರದೆಯ ಮೂಲಕ ಸಾರ್ವಜನಿಕರು ನೋಡಲು ಅನುವು ಮಾಡಿಕೊಟ್ಟಿದ್ದು. ಅದೇ ರೀತಿ ಈ ವರ್ಷ ಮಹಾಶಿವರಾತ್ರಿಯಂದು ದೇವರ ಗೀತ ಗಾಯನಗಳ ಮಹಾಶಿವೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಇದೇ ರೀತಿ ಇನ್ನು ಮುಂದೆ ಪ್ರತಿ ವರ್ಷವೂ ಸಹ ಇದೇ ಹೋಂಡಾ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡುವ ರೀತಿಯಲ್ಲಿ ಈಗ ನಡೆದ ಇಂಡಿಯಾ ಪಾಕಿಸ್ತಾನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವು ಜಯಗಳಿಸಿರುವುದು ಅತ್ಯಂತ ಸಂತೋಷದಾಯಕವಾಗಿದೆ ಎಂದು ನುಡಿದರು.
ಈ ಶಿವೋತ್ಸವ ಕಾರ್ಯಕ್ರಮದಲ್ಲಿ ದೇವರ ಭಕ್ತಿ ಜಾಗರಣೆ ಮಾಡಲು ಮತ್ತು ಈ ಕಾರ್ಯಕ್ರಮವನ್ನು ವೀಕ್ಷಿಸಲು ಸುಮಾರು 20 ಸಾವಿರಕ್ಕೂ ಹೆಚ್ಚಿನ ಜನ ಆಗಮಿಸಿದ್ದರು.
ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಸಹ ಏರ್ಪಡಿಸಲಾಗಿತ್ತು.
ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಶ್ರೀಮತಿ ಅನನ್ಯ ಭಟ್ ಮತ್ತು ತಂಡದವರಿಂದ ಹಾಗೂ ಸರಿಗಮಪ ಖ್ಯಾತಿಯ ಜ್ಞಾನ, ರಶ್ಮಿ ಶ್ರೀನಿವಾಸ್, ಪೃಥ್ವಿ ಭಟ್, ಅಶ್ವಿನ್ ಶರ್ಮ, ದಿವ್ಯ ರಾಮಚಂದ್ರ, ಪ್ರಿಯಾ ರವರಿಂದ ಭಕ್ತಿ ಗೀತೆಗಳ ಮೂಲಕ ನೆರೆದಿದ್ದ ಭಕ್ತಾದಿಗಳನ್ನು ಮೂಕ ಪ್ರೇಕ್ಷಕರನ್ನಾಗಿ ಮಾಡಿದರು.ಗಿಚ್ಚಿ ಗಿಲಿ ಗಿಲಿ ತಂಡದ ಕರಿಬಸು, ವಿನೋದ್ (ಗೊಬ್ರಗಾಲ) ಚಂದ್ರಪ್ರಭ ಇನ್ನಿತರರು ಹಾಸ್ಯ ಪ್ರದರ್ಶನವನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸಿ ಎಲ್ ಪಿ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನಪರಿಷತ್ ಸದಸ್ಯ ಎಂ ಎಲ್ ಅನಿಲ್ ಕುಮಾರ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಶಾಸಕ ಎ ನಾಗರಾಜ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ ನರಸಿಂಹ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಾಪುರ ಕೃಷ್ಣಪ್ಪ, ಶೆಟ್ಟಹಳ್ಳಿ ರಾಮಮೂರ್ತಿ, ಮುಖಂಡ ಹರೀಶ್ ನಂಜೇಗೌಡ, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಮ್ಮದ್ ನಹೀಂ ವುಲ್ಲಾ, ಮಾಸ್ತಿ ಯುವ ಕಾಂಗ್ರೆಸ್ ಅಧ್ಯಕ್ಷ ವಸಂತ್ ಕುಮಾರ್, ಮಾಸ್ತಿ ಚೇತನ್, ಮುಖಂಡರಾದ ಜಾಕಿ ಮಂಜು, ನಾಗಪುರ ನವೀನ್, ಶಬ್ಬೀರ್, ತನ್ವೀರ್, ನಗರಸಭೆ ಮಾಜಿ ಸದಸ್ಯರು, ಭಕ್ತಾದಿಗಳು, ಇನ್ನಿತರರು ಉಪಸ್ಥಿತರಿದ್ದರು.
